Thursday, November 1, 2007

ಅಖಂಡ ಕರ್ನಾಟಕಕ್ಕೆ 51ನೇ ರಾಜ್ಯೋತ್ಸವದ ಸಂಭ್ರಮ


ಸಂಗ್ರಹ :ನೆಟ್
ಅಖಂಡ ಕರ್ನಾಟಕಕ್ಕೆ 51ನೇ ರಾಜ್ಯೋತ್ಸವದ ಸಂಭ್ರಮ। ಸ್ವತಂತ್ರ ಭಾರತವು ಭಾಷಾವಾರು ಪ್ರಾಂತ್ರ್ಯಗಳನ್ನು ರಚಿಸಿದ ಹಿನ್ನೆಲೆಯಲ್ಲಿ ಮೈಸೂರು ರಾಜ್ಯ 1956ರ ನವೆಂಬರ್ 1ರಂದು ಅಸ್ತಿತ್ವಕ್ಕೆ ಬಂತು। ನಂತರ ದೇವರಾಜ ಅರಸು ಸರಕಾರಾವಧಿಯಲ್ಲಿ ಮೈಸೂರು ಕರ್ನಾಟಕವೆಂದು ನಾಮಕರಣಗೊಂಡಿತು। ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಕರ್ನಾಟಕ ಕೇವಲ ಒಂದು ರಾಜ್ಯ ಮಾತ್ರವಲ್ಲ. ಅದೊಂದು ವೈವಿಧ್ಯತೆಗಳ ಸಂಗಮ. ಇಡಿ ವಿಶ್ವಕ್ಕೆ ಮಾದರಿ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ದೇಶದ ಮುಂಚೂಣಿ ರಾಜ್ಯಗಳ ಸ್ಥಾನದಲ್ಲಿದೆ ಕರ್ನಾಟಕ. ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರು ಕಟ್ಟಿದ ನಾಡಗೀತೆಯ ಸವಿ, ಕರಾವಳಿಯ ಕಡಲ ತಡಿಯಿಂದ ಹಿಡಿದು, ಸಹ್ಯಾದ್ರಿಯ ಮುಗಿಲನ್ನು ಚುಂಬಿಸಿ, ಜಗತ್ತಿನೆಲ್ಲೆಡೆ ಐಕ್ಯತೆಯನ್ನು ಪಸರಿಸಿದೆ. ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ನಮಗೆ ಹೆಮ್ಮೆಪಡಲು ಹಲವು ವಿಷಯಗಳಿವೆ. ದೇಶದ ಭೂಪಟ ಹಾಸಿ ಹುಡುಕಿದರೆ, ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ದಾಖಲಿಸಿರುವ ರಾಜ್ಯ ನಮ್ಮ ಕರ್ನಾಟಕ. ಅತ್ಯಾಧುನಿಕ ವೈಜ್ಞಾನಿಕ ಸಂಶೋಧನೆಯಿಂದ ಹಿಡಿದು, ಸಾವಿರಾರು ಜನರಿಗೆ ಅನ್ನ ನೀಡುವ ಕೃಷಿಯಲ್ಲೂ ಕರ್ನಾಟಕ ಸ್ವಾವಲಂಬನೆ ಹೊಂದಿದೆ. ರಾಜ್ಯದಲ್ಲಿ ಕೈಗೊಳ್ಳಲಾಗಿರುವ ಆರ್ಥಿಕ ಅಭಿವೃದ್ಧಿಕಾರ್ಯಗಳು ಬಡವನ ಮನೆಯಂಗಳಕ್ಕೂ ಭರವಸೆಯ ಹೊಂಗಿರಣ ಮೂಡಿಸಿದೆ. ಕಳೆದ 51 ವರ್ಷಗಳಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ರಾಜಕೀಯ ನಾಯಕರ ಭರವಸೆಯ ಭಾಷಣದ ನಡುವೆ, ನಿಜವಾದ ಪ್ರಾಮಾಣಿಕತೆಯಿಂದ ದುಡಿದ ಬೆರಳೆಣಿಕೆಯ ಅಧಿಕಾರಿ ವರ್ಗದಿಂದ ಸ್ವಾವಲಂಬಿ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಕೂಡ ಸ್ಥಾನ ಪಡೆದಿದೆ. ಆರೋಗ್ಯ, ಶಿಕ್ಷಣ, ರಾಜಕೀಯ, ಸಾಮಾಜಿಕ, ಆರ್ಥಿಕ ವಲಯಗಳಲ್ಲಿ ಹೊಸ ಬೆಳಕು ಮೂಡಿದೆ. ಕುಗ್ರಾಮದ ಕತ್ತಲಲ್ಲೂ ಮಾಹಿತಿ ತಂತ್ರಜ್ಞಾನದ ಹೊನಲು ಹರಿದಿದೆ. ಕರ್ನಾಟಕ ರಾಜ್ಯೋತ್ಸವ ದಿನದೆಂದು ನಮ್ಮ ಸಾಧಕ ಬಾಧಕಗಳ ಕುರಿತು ಚರ್ಚೆ ಮಾಡುವುದಕ್ಕಿಂತ, ರಾಜಕಾರಣಿಗಳನ್ನು ಹೀಗಳೆಯುವದಕ್ಕಿಂತ ನಮ್ಮ ರಾಜ್ಯಕ್ಕಾಗಿ ನಾವು ಮಾಡಬಹುದಾದ ಅಳಿಲು ಸೇವೆಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ ಎನಿಸುತ್ತದೆ. ನಿಧಿ ಎತ್ತದೆ, ಘೋಷಣೆ ಕೂಗದೆ, ಕರಪತ್ರ ಹಂಚದೆ, ಪ್ರಚಾರ ಬಯಸದೆ, ಸಂಘ ಕಟ್ಟದೆ, ಮತ್ತೊಬ್ಬರ ಮಾನಸಿಕ ನೆಮ್ಮದಿ ಕೆಡಿಸದೆ ಕನ್ನಡ ಸೇವೆ ಮಾಡಲು ಸಾಧ್ಯವಾಗುತ್ತದೆಯೇ? ಆ ಕುರಿತು ಚಿಂತನೆ ನಡೆಸೋಣ. ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ನಡೆಸೋಣ. ಬೆಳಗಾವಿ ಹಾಗೂ ಕಾಸರಗೋಡು ಗಡಿ ಸಮಸ್ಯೆ, ಬಳ್ಳಾರಿ ಗಣಿ ಸಮಸ್ಯೆ, ಕೊಡಗಿನ ಪ್ರತ್ಯೇಕಾ ಕೂಗು, ನಕ್ಸಲ್ ಸಮಸ್ಯೆ, ರಾಜಕೀಯ ದೊಂಬರಾಟ ಹೀಗೆ ಸಮಸ್ಯೆಗಳ ಕೊನೆ ಇಲ್ಲದ ಪಟ್ಟಿ ಏನೇ ಇರಲಿ, ಅದೆಲ್ಲವನ್ನು ಮೀರಿದ ಅಂತಃಶಕ್ತಿ ಮತ್ತು ವೈವಿಧ್ಯತೆ ಕರ್ನಾಟಕ ಮಣ್ಣಿನಲ್ಲಿದೆ. ತಮಿಳರಿಂದ ನಾವು ಭಾಷಾಭಿಮಾನ ಕಲಿಯುವ ಮಟ್ಟಿಗೆ ನಮ್ಮತನವನ್ನು ಕಳೆದುಕೊಂಡಿದ್ದೇವಲ್ಲಾ? ಆ ಜಾಗೃತಿ ನಮ್ಮಲ್ಲಿ ಬೆಳೆದರೆ ಸಾಕು. ಕರ್ನಾಟಕದ ಸೇವೆಗೆ ನಾವು ಮೊದಲ ಕೈಜೋಡಿಸಿದಂತೆ. ನಾವಾಡುವ ಮಾತಿನಲ್ಲಿ, ಬರವಣಿಗೆಯಲ್ಲಿ, ಮತ್ತೊಬ್ಬರಿಗೆ ತೋರಿಸುವ ಗೌರವದಲ್ಲಿ, ಸೌಜನ್ಯದಲ್ಲಿ, ಸಭ್ಯತೆಯಲ್ಲಿ, ವಿನಯದಲ್ಲಿ, ಪ್ರಾಮಾಣಿಕತೆಯಲ್ಲಿ ಕನ್ನಡವನ್ನು ಹೊರಸೂಸಲು ಸಾಧ್ಯವಿದೆ. ನಮ್ಮ ಇಡಿ ವ್ಯಕ್ತಿತ್ವವೇ ಒಂದು ಕನ್ನಡ ಪ್ರತಿನಿಧಿಯಾಗಿ ರೂಪಿಸಿಕೊಳ್ಳಲು ಸಾಧ್ಯವಿದೆ. ಈ ಪ್ರಯತ್ನಕ್ಕೆ ಆದರ್ಶದ ಬೆನ್ನು ಹತ್ತಬೇಕಿಲ್ಲ. ಪ್ರಚಾರ ಬೇಕಿಲ್ಲ. ದೇಣಿಗೆ ಸಂಗ್ರಹಿಸಬೇಕಿಲ್ಲ. 51 ನೇ ಕನ್ನಡ ರಾಜ್ಯೋತ್ಸವ ಅಂಥದೊಂದು ಚಿಂತನೆಯನ್ನು ನಮ್ಮಲ್ಲಿ ಹುಟ್ಟು ಹಾಕಿದರೆ ಈ ಆಚರಣೆ ಸಾರ್ಥಕ.
-ವಂದನೆ ಗಳು
ರಾಮ್
ಸಂಗ್ರಹ :ನೆಟ್